೧೧೪೧ ಜಾಗಗಳು ಸ್ಮಶಾನಕ್ಕಾಗಿ ನೀಡಿದ್ದು ಅವುಗಳ ಒತ್ತುವರಿ : ಹೈಕೋರ್ಟ್ ಗೆ ಸರ್ಕಾರ ಮಾಹಿತಿ

 ಸ್ಮಶಾನಕ್ಕಾಗಿ ನೀಡಿರುವ 1,141 ಜಾಗಗಳು ಒತ್ತುವರಿಯಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಕರ್ನಾಟಕ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

                                              ಕರ್ನಾಟಕ ಹೈಕೋರ್ಟ್

By : Rekha.M
Online Desk

ಬೆಂಗಳೂರು: ಸ್ಮಶಾನಕ್ಕಾಗಿ ನೀಡಿರುವ 1,141 ಜಾಗಗಳು ಒತ್ತುವರಿಯಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಕರ್ನಾಟಕ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪಾಲನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖ ಅವರಿದ್ದ ವಿಭಾಗೀಯ ನಡೆಸಿತು.

ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಸಲ್ಲಿಸಿದ ಅನುಪಾಲನಾ ವರದಿಯನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ರಾಜ್ಯದಲ್ಲಿ ಒತ್ತುವರಿಯಾಗಿರುವ ಸ್ಮಶಾನ ಜಾಗಗಳನ್ನು ತೆರವುಗೊಳಿಸಬೇಕು ಮತ್ತು ಶವಸಂಸ್ಕಾರ ಸ್ಥಳಾವಕಾಶ ಇಲ್ಲದ ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡಲು ಮೂರು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಆಗಸ್ಟ್ 16ರಂದು ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಸರ್ಕಾರ ಸೆಪ್ಟೆಂಬರ್‌ 5ರಂದು ಅನುಪಾಲನಾ ವರದಿ ಸಲ್ಲಿಸಿದೆ.

ರಾಜ್ಯದಲ್ಲಿ ಒಟ್ಟು 1,141 ಸ್ಮಶಾನ ಜಾಗಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದ್ದು, ಇಲ್ಲಿವರೆಗೆ 282 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನೂ 859 ಸ್ಮಶಾನ ಜಾಗಗಳ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ. ಅದೇ ರೀತಿ ರಾಜ್ಯದಲ್ಲಿರುವ ಒಟ್ಟು 29,616 ಗ್ರಾಮಗಳ ಪೈಕಿ 27,458 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಲಾಗಿದ್ದು, ಶೇ.92ರಷ್ಟು ಸ್ಮಶಾನ ಒದಗಿಸಿದಂತಾಗಿದೆ. ಇನ್ನುಳಿದ 1,003 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸಬೇಕಾಗಿದೆ. ಇದರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆಯ ಸಮಸ್ಯೆ, ವ್ಯಾಜ್ಯಗಳು ಹಾಗೂ ಜಮೀನು ಖರೀದಿ ಮಾಡಬೇಕಾಗಿರುವ ಕಾರಣದಿಂದ 600 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಲು ಆಗಿಲ್ಲ. 403 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಬೇಕಾಗಿದ್ದು, ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸರ್ಕಾರದ ವರದಿಯಲ್ಲಿ ವಿವರಿಸಲಾಗಿದೆ.

ಅದೇ ರೀತಿ 25,011 ಸ್ಮಶಾನ ಜಾಗಗಳನ್ನು ಆರ್‌ಟಿಸಿಯಲ್ಲಿ ಉಲ್ಲೇಖಿಸಲಾಗಿದ್ದು, 2,333 ಬಾಕಿ ಇವೆ. 23,815 ಸ್ಮಶಾನ ಜಾಗಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಸುಪರ್ದಿಗೆ ನೀಡಲಾಗಿದ್ದು, 3,765 ಜಾಗಗಳನ್ನು ಸುಪರ್ದಿಗೆ ನೀಡಲು ಬಾಕಿ ಇದೆ. 516 ಸ್ಮಶಾನ ಜಾಗಗಳ ಖರೀದಿ, ಮೀಸಲಿಡುವ ಮತ್ತು ಮಂಜೂರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸರ್ಕಾರ ಹೇಳಿದೆ.



Post a Comment

أحدث أقدم