ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ

 

ನಿಷೇದಾಜ್ಞೆ ಜಾರಿ, ನಗರದಲ್ಲಿ ಪ್ರಕ್ಷುಬ್ಧ ವಾತಾವರಣ
  ಶಿವಮೊಗ್ಗ,ಆ15 :  ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಮಾರಂಭದಲ್ಲಿ ಇಡೀ ದೇಶ ಮುಳುಗಿದ್ದರೆ ಶಿವಮೊಗ್ಗ ನಗರದಲ್ಲಿ ಮತ್ತೆ ಕೋಮು ಧ್ವೇಷ ಅನಾವರಣಗೊಂಡಿದೆ. 

 ಶಿವಮೊಗ್ಗ ಅಮೀರ್ ಅಹಮದ್ ವೃತ್ತದಲ್ಲಿ ಹಾಕಿದ್ದ ವೀರಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಉದ್ವಿಗ್ನತೆಗೆ ತಿರುಗಿ ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ನಗರ ವ್ಯಾಪ್ತಿಯಲ್ಲಿ 144  ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಗಾಂಧೀಬಜಾರಿನ ಉಪ್ಪಾರ ಕೇರಿಯ ಯುವ ಪ್ರೇಮ್ ಸಿಂಗ್ ಹಾಗೂ ಅಶೋಕ ನಗರದಲ್ಲಿ ಪ್ರವೀಣ್ ಎಂಬ ಯುವಕನಿಗೆ ಚಾಕು ಚುಚ್ಚಲಾಗಿದ್ದು, ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ವ್ಯಾಪಕ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. 

ಘಟನೆಗೆ ಕಾರಣವೇನು?:

ಸ್ವಾತಂತ್ರ್ಯದ ಅಮೃತಮಹೋತ್ಸವದ ಆಚರಣೆ ಶಿವಮೊಗ್ಗದಲ್ಲಿ ಅದ್ಧೂರಿಯಾಗಿತ್ತು. ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ವೃತ್ತದಲ್ಲಿ ವೇದಿಕೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಾರತ ಮಾತೆ ಮೂರ್ತಿ ಮಾಡಿ ಪೂಜೆ ಸಲ್ಲಿಸಲಾಗಿತ್ತು.  ಶಿವಪ್ಪ ನಾಯಕ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ವೀರಸಾವರ್ಕರ್ ಅವರ ಉದ್ದನೆಯ ಫ್ಲೆಕ್ಸ್ ಹಾಕಿದ್ದರು. ಇದನ್ನು ಖಂಡಿಸಿದ ಒಂದು ಗುಂಪು ಅವರ ಫ್ಲೆಕ್ಸ್ ತೆಗೆಯಿರಿ ಎಂದು ಹೇಳಿತು. ಮಾತ್ರವಲ್ಲದೆ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕಿ ಎಂದು ಒತ್ತಡ ಹಾಕಿದರೆನ್ನಲಾಗಿದೆ. ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದಾಗ ಒಂದು ಗುಂಪು ಸಾವರ್ಕರ್ ಫ್ಲೆಕ್ಸ್ ಅನ್ನು ತೆರವುಮಾಡಿದರು. ಇದಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತವಾಯಿತು. ಈ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.                                                                  ಈ ಸುದ್ದಿ ಹರಡುತ್ತಿದ್ದಂತೆ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ನಡುವೆ ಹಿಂದೂಪರ ಸಂಘಟನೆಗಳು ಗಾಂಧಿ ಬಜಾರಿನಲ್ಲಿ ಪ್ರತಿಭಟನೆ ಮತ್ತು ಧರಣಿಗೆ ಮುಂದಾದರು. ಮಾತ್ರವಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ರ್‍ಯಾಲಿ ನಡೆಸಲು ಮುಂದಾದರು ಆದರೆ ಪೊಲೀಸರು ಅದನ್ನು ತಡೆದರು. 

ಸ್ಥಳಕ್ಕೆ ಗೃಹಸಚಿವ ಆರಗಜ್ಞಾನೇಂದ್ರ, ಶಾಸಕರು, ಹಿರಿಯ ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. 

Post a Comment

أحدث أقدم