ಕತೆಗಳಿಗೆ ಎಂದೂ ಸಾವಿಲ್ಲ; ವ್ಯಕ್ತಿತ್ವ, ಕಲ್ಪನೆ, ಭಾವನೆಯ ವಿಕಾಸಕ್ಕೆ ಪೂರಕವಾಗಿದೆ: ಗೋಪಾಲ್‌ ಯಡಗೆರೆ

 

ಕಥೆಗಳ ಪ್ರೇರಣೆಯು ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲಿಯೂ ಕಲ್ಪನೆ, ಭಾವ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಹೇಳಿದರು.


ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಏರ್ಪಡಿಸಿದ್ದ "ಕಥೆ ಹೇಳುವೆವು ಕೇಳಿ" ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆಯೂ ಕಥೆಗಳು ಇದ್ದವು, ಈಗಲೂ ಇವೆ, ಮುಂದೇಯೂ ಇರುತ್ತವೆ. ಸಾಹಿತ್ಯ ಮತ್ತು ಕಥೆಗಳಿಗೆ ಯಾವತ್ತೂ ಸಾವಿಲ್ಲ ಎಂದರು.


ಕಥೆಗಳ ಕೇಳುವಿಕೆ ಮಗುವಿಗೆ ಹುಟ್ಟಿದ ಕೆಲವೇ ದಿನಗಳಿಂದ ಆರಂಭವಾಗುತ್ತದೆ. ಕಥೆಗಳ ಪ್ರೇರಣೆಯಿಂದ ಮಗುವಿನಲ್ಲಿ ಆಗುವ ಕಲ್ಪನೆಯ ವಿಕಾಸ, ವ್ಯಕ್ತಿತ್ವದ ವಿಕಾಸದಿಂದ ಮಗುವು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತದೆ. ತಂದೆ-ತಾಯಿಯ ಮಡಿಲಲ್ಲಿ ಮಲಗಿ ರೋಚಕತೆಯಿಂದ, ಭಾವನಾತ್ಮಕತೆಯಿಂದ, ತಾದಾತ್ಮ್ಯತೆಯಿಂದ ಕತೆಗಳನ್ನು ಆಸ್ವಾದಿಸುತ್ತದೆ ಎಂದರು.


ಮೊದಲು ಕಥೆಗಳೆಂದರೆ ಅದು ಕೇಳುವ ಕಥೆಗಳಾಗಿದ್ದವು. ಈಗ ಕೇಳುವುದರ ಜೊತೆಗೆ ನೋಡುವ ಕಥೆಗಳು ಮುಂಚೂಣಿಗೆ ಬಂದು ಕೂತಿವೆ. ಕೇಳುವ ಕಥೆಗಳಲ್ಲಿ ಮಗು ತನ್ನದೇ ಕಲ್ಪನೆಯಿಂದ ಸ್ವೀಕರಿಸಿದರೆ, ನೋಡುವ ಕಥೆಗಳಲ್ಲಿ ಒಂದು ರೀತಿಯ ಈ ಕಲ್ಪನೆಯಿಲ್ಲದ ಸ್ಥಿತಿಯನ್ನು ಗಮನಿಸಬಹುದಾಗಿದೆ ಎಂದು ವಿಶ್ಲೇಷಿಸಿದರು.


ಇಂದಿನ ಮಕ್ಕಳು ಕೇಳುವಿಕೆ, ಓದುವಿಕೆಯಿಂದ ನೋಡುವ ಕಥೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಯಸ್ಕರರು ಬದಲಾದ ಡಿಜಿಟಲ್‌ ಫಾರ್ಮ ಮೂಲಕ ಕೇಳುವ ಕತೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕಥೆಗಳ ಪ್ರಸ್ತುತತೆಯ ಮಾಧ್ಯಮಗಳು ಬದಲಾಗುತ್ತಿದೆಯೇ ಹೊರತು ಅದರ ಆಕರ್ಷಣೆ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಮಟ್ಟರು.


ಇಂದಿನ ಸಾಹಿತಿಗಳು, ಕತೆಗಾರರು ತಂತ್ರಜ್ಞಾನದ ಅರಿವನ್ನು ಹೊಂದ ಬೇಕು. ಹೊಸ ತಂತ್ರಜ್ಞಾನದ ಮೂಲಕ ಓದುಗರು, ಸಾಹಿತ್ಯಾಸಕ್ತರನ್ನು ತಲುಪಬೇಕು ಎಂದು ಹೇಳಿದರು.


ಗೋಷ್ಠಿಯಲ್ಲಿ ಶೈಲಜಾ, ಡಾ.ನಾಗೇಂದ್ರ ಆಚಾರ್ಯ, ಸಂಧ್ಯಾ ಗಾಜನೂರು, ನೇತ್ರಾವತಿ ಸೊರಬ, ಟಿ.ಜಿ.ಹರೀಶ್‌ ಆಳ್ವಾಸ್, ಈಶ್ವರಪ್ಪ ಮಂಕಳಲೆ, ಅಲಕ ತೀರ್ಥಹಳ್ಳಿ ಮತ್ತಿತರರು ಇದ್ದರು.

Post a Comment

Previous Post Next Post