ಅಯೋಧ್ಯೆ ರಾಮಮಂದಿರ: ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ಕೆಲ ಪ್ರಮುಖ ಹಿಂದೂ ಸ್ವಾಮೀಜಿಗಳ ನಿರ್ಧಾರ!

 ಅಯೋಧ್ಯೆಯಲ್ಲಿನ ನೂತನ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಹಲವು ಹಿಂದೂ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ವಿಭಿನ್ನ ದೃಷ್ಟಿಕೋನ ಮತ್ತು ನಂಬಿಕೆಗಳನ್ನು ಒತ್ತಿ ಹೇಳಿದ್ದಾರೆ. 

                                          ಪುರಿ ಮತ್ತು ಜ್ಯೋತಿಶ್ ಪೀಠದ ಸ್ವಾಮೀಜಿಗಳು

Posted By : Rekha.M
Source : Online Desk

ನವದೆಹಲಿ: ಅಯೋಧ್ಯೆಯಲ್ಲಿನ ನೂತನ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಹಲವು ಹಿಂದೂ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ವಿಭಿನ್ನ ದೃಷ್ಟಿಕೋನ ಮತ್ತು ನಂಬಿಕೆಗಳನ್ನು ಒತ್ತಿ ಹೇಳಿದ್ದಾರೆ. 

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ಶಂಕರಾಚಾರ್ಯರ  ಕೆಲ ಮಠಗಳ ಸ್ವಾಮೀಜಿಗಳು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಸನಾತನ ಧರ್ಮದ  ಅನುಸಾರ  ಸಮಾರಂಭ ನಡೆಯುತ್ತಿಲ್ಲ ಎಂಬುದು ಅವರು ಹೇಳಿದ್ದಾರೆ. 

ಪುರಿಯ ಗೋವರ್ಧನ ಪೀಠದ  ಸ್ವಾಮೀಜಿ  ನಿಶ್ಚಲಾನಂದ ಸರಸ್ವತಿ ಅವರು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು  ಕಳೆದ ವಾರ ವರದಿ ಮಾಡಿತ್ತು. ನಮ್ಮ ಶಾಸ್ತ್ರಗಳ ಅನುಸಾರ ದೇವಸ್ಥಾನದಲ್ಲಿ ರಾಮಲಾಲ ವಿಗ್ರಹವನ್ನು ಪ್ರತಿಷ್ಠಾಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು.

ಗುರುವಾರ ಅವರು ರಾಮನ ಗೌರವವನ್ನು ಕಾಪಾಡಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಪೂಜೆಯು ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ತಮ್ಮ ದೃಢನಿಲುವನ್ನು ಪುನರುಚ್ಚಿಸಿದ ನಿಶ್ಚಲಾನಂದ್ ಸ್ವಾಮೀಜಿ, 'ಪ್ರಾಣ ಪ್ರತಿಷ್ಠಾಪನೆ' ಸಮಾರಂಭಕ್ಕೆ ರಾಜಕೀಯ ಛಾಯೆ ನೀಡಲಾಗಿದೆ ಎಂದು ಪ್ರತಿಪಾದಿಸಿದರು.

ದೇಶದ ಪ್ರಧಾನಿಯವರು ಗರ್ಭಗುಡಿಯಲ್ಲಿದ್ದು, ವಿಗ್ರಹವನ್ನು ಸ್ಪರ್ಶಿಸುತ್ತಾರೆ ಮತ್ತು ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭ ಉದ್ಘಾಟಿಸುತ್ತಾರೆ. ಇದಕ್ಕೆ ರಾಜಕೀಯ ರಂಗು ನೀಡಲಾಗಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಬೇಕಾದರೆ, ಅದು ನಿಯಮ ಪ್ರಕಾರವಾಗಿರಬೇಕು. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅರ್ಧ-ಸತ್ಯ ಮತ್ತು ಅರ್ಧ-ಸುಳ್ಳನ್ನು ಬೆರೆಸಬಾರದು; ಎಲ್ಲವೂ ಧರ್ಮಗ್ರಂಥದ ಜ್ಞಾನದೊಂದಿಗೆ ಹೊಂದಿಕೊಳ್ಳಬೇಕು ಎಂದು ಅವರು ಹೇಳಿದರು.

ಮತ್ತೊಂದೆಡೆ, ಜನವರಿ 22 ರಂದು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವುದಿಲ್ಲ ಎಂದು ಪ್ರತಿಪಾದಿಸಿದ ಶಂಕರಾಚಾರ್ಯ ಜ್ಯೋತಿಶ್ ಪೀಠದ ಸ್ಲಾಮೀಜಿ ಅವಿಮುಕ್ತೇಶ್ವರಾನಂದ, ಮಂದಿರ ನಿರ್ಮಾಣ ಸನಾತನ ಧರ್ಮದ ವಿಜಯವನ್ನು ಸೂಚಿಸುವುದಿಲ್ಲ ಎಂದು ಹೇಳಿದರು. 

"ಅಯೋಧ್ಯೆಯು ಈಗಾಗಲೇ ರಾಮಮಂದಿರವನ್ನು ಹೊಂದಿತ್ತು, ಮತ್ತು ಅದರ ನಿರ್ಮಾಣವು ಧರ್ಮದ ಕೊಡುಗೆ ಅಥವಾ ವಿಜಯವಲ್ಲ. ರಾಜಕೀಯ ನಾಯಕರು ಜನವರಿ 22 ರಂದು ಅಯೋಧ್ಯೆಗೆ ಹೋಗದಿರುವುದು ಅವರ ರಾಜಕೀಯ ನಿರ್ಬಂಧಗಳಿಂದಾಗಿರಬಹುದು, ಆದರೆ ಅಂತಹ ಯಾವುದೇ ನಿರ್ಬಂಧಗಳು ನನ್ನನ್ನು ಬಂಧಿಸುವುದಿಲ್ಲ. ದೇಶದಲ್ಲಿ ಗೋಹತ್ಯೆ ಕೊನೆಯಾದಾಗ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ, ಉತ್ಸಾಹದಿಂದ ಆಚರಿಸುತ್ತೇನೆ ಎಂದು ಅವರು ತಿಳಿಸಿದರು. 

ಶೃಂಗೇರಿ ಶಾರದಾ ಪೀಠ ಸ್ಪಷ್ಟನೆ: ಈ ಮಧ್ಯೆ ಕೆಲ ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಶಾರದಾಪೀಠದ ಭಾರತೀತೀರ್ಥಸ್ವಾಮಿಗಳ ಫೋಟೋದ ಜೊತೆಗೆ ಶ್ರೀಗಳು ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥ ಬರುವಂತೆ ಸಂದೇಶವನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಶ್ರೀಗಳು ಆ ರೀತಿಯ ಯಾವುದೇ ಸಂದೇಶ ನೀಡಿಲ್ಲ ಎಂದು ಶೃಂಗೇರಿ ಶಾರದಾ ಪೀಠ ಸ್ಪಷ್ಟನೆ ನೀಡಿದೆ.




Post a Comment

Previous Post Next Post