ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ಬಂಧನ! ಕೆಲಸದಿಂದ ತೆಗೆದಿದ್ದಕ್ಕೆ ಕೊಲೆ?

 ಬೆಂಗಳೂರು: ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರತಿಮಾ ಅವರ ಕಾರು ಚಾಲಕನಾಗಿದ್ದು ಇತ್ತೀಚೆಗಷ್ಟೇ ಕೆಲಸ ಬಿಟ್ಟು ಹೋಗಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ಕಿರಣ್, ಕೆಲವು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದೇ ಕಾರಣಕ್ಕೆ ಕಿರಣ್ ನನ್ನು ಇತ್ತೀಚೆಗೆ ಪ್ರತಿಮಾ ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿದೆ. ಅದೇ ಸೇಡಿಗೆ ಕಿರಣ್, ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಕೆಲಸದಿಂದ ತಗೆದಿದ್ದು ಯಾಕೆ?

ಇತ್ತೀಚೆಗೆ, ಇಲಾಖೆಯಿಂದ ಪ್ರತಿಮಾ ಅವರ ಉಪಯೋಗಕ್ಕಾಗಿ ಬೊಲೆರೊ ವಾಹನವನ್ನು ನೀಡಲಾಗಿತ್ತು. ಆ ಹೊಸ ಕಾರನ್ನು ಚಾಲಕ ಕಿರಣ್ ಅಪಘಾತಕ್ಕೀಡು ಮಾಡಿದ್ದ. ಅದರಿಂದ, ಸಿಟ್ಟಿಗೆದ್ದಿದ್ದ ಪ್ರತಿಮಾ ಅವರು ಕಿರಣ್ ನನ್ನು ಕೆಲಸದಿಂದ ವಜಾಗೊಳಿಸಿದ್ದರೆಂದು ಹೇಳಲಾಗಿದೆ.

ಭಾನುವಾರ (ನ. 5) ಬೆಳಕಿಗೆ ಬಂದಿದ್ದ ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಹಲವಾರು ಅನುಮಾನಗಳು ಕಾಡಿದ್ದವು. ಪ್ರತಿಮಾ ಅವರು ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿಸಿ ಕೊಲೆ ಮಾಡಿರುವುದು ಸ್ಪಷ್ಟವಾಗಿತ್ತು. ಅದರಿಂದ ಯಾರೋ ಪ್ರತಿಮಾ ಅವರಿಗೆ ಪರಿಚಯದವರೇ ಕೊಲೆ ಮಾಡಿರಬಹುದೆಂದು ಗುಮಾನಿಯಿತ್ತು.
ಅದೇ ವೇಳೆ, ಪ್ರತಿಮಾ ಅವರ ಮನೆಗೆ ಬಂದು ಹೋಗುತ್ತಿದ್ದವರ ವಿವರಗಳನ್ನು ಕಲೆ ಹಾಕಿದ್ದಾಗ, ಕಿರಣ್ ವಾರದ ಹಿಂದೆ ಕೆಲಸ ಬಿಟ್ಟಿದ್ದ ಅಂಶ ಪತ್ತೆಯಾಗಿತ್ತು. ಆದರೆ, ಕಿರಣ್ ನನ್ನು ಹುಡುಕಾಡಿದಾಗ ಆತ ನಾಪತ್ತೆಯಾಗಿದ್ದ. ಕಡೆಗೆ ಆತನ ಮೊಬೈಲ್ ಅನ್ನು ಟ್ರೇಸ್ ಮಾಡುವ ಮೂಲಕ ಆತನ ಲೊಕೇಶನ್ ಪತ್ತೆ ಮಾಡಿದ ಸುಬ್ರಹ್ಮಣ್ಯ ನಗರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಕೆಲಸದಿಂದ ತೆಗೆದ ಕೂಡಲೇ ಪ್ರತಿಮಾರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಕಿರಣ್, ಪೊಲೀಸರ ವಿಚಾರಣೆ ವೇಳೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿಯೇ ನಡೆದಿದ್ದ ಕೊಲೆ

ಶನಿವಾರ ರಾತ್ರಿ, ಪ್ರತಿಮಾ ಅವರು ತಮಗೆ ನೀಡಿದ್ದ ಸರ್ಕಾರಿ ಕಾರಿನಲ್ಲೇ ಬಂದು ಮನೆಗೆ ತಲುಪಿದ್ದರು. ಅಂದು ರಾತ್ರಿ ಸುಮಾರು 8.30ರ ಸುಮಾರಿಗೆ ಅವರ ಸಹೋದರ ಫೋನ್ ಮಾಡಿದ್ದರು. ಅವರು ಕರೆ ಸ್ವೀಕರಿಸಿರಲಿಲ್ಲ. ಪುನಃ ಭಾನುವಾರ ಬೆಳಗ್ಗೆ ಕರೆ ಮಾಡಿದಾಗ ಆಗಲೂ ಕರೆ ಸ್ವೀಕರಿಸಿದೇ ಇದ್ದಿದ್ದರಿಂದ ಅವರು ಪ್ರತಿಮಾ ಅವರು ಬಾಡಿಗೆಯಿದ್ದ ಕೆಳಗಿನ ಮನೆಯವರಿಗೆ ಫೋನಾಯಿಸಿ, ಮೇಲೆ ಹೋಗಿ ಪ್ರತಿಮಾರನ್ನು ಮಾತನಾಡಿಸುವಂತೆ ಕೇಳಿಕೊಂಡಿದ್ದರು.

ಹಾಗೆಯೇ, ಪ್ರತಿಮಾ ಅವರ ಕೆಳಗಿನ ಮನೆಯವರು ಪ್ರತಿಮಾ ಅವರ ಮನೆಯಲ್ಲಿ ಹೋಗಿ ನೋಡಿದಾಗ ಅವರ ಬೆಡ್ ರೂಮಿನಲ್ಲಿ ಪ್ರತಿಮಾ ಅವರ ಶವ ಬಿದ್ದಿದ್ದು ಕಂಡು ಬಂದು ಗಾಬರಿಯಾಗಿ, ಪ್ರತಿಮಾ ಸಹೋದರಿಗೆ ಸುದ್ದಿ ಮುಟ್ಟಿಸಿದ್ದರು. ಆಗ ಬೇಗನೇ ಧಾವಿಸಿ ಬಂದ ಪ್ರತಿಮಾ ಅವರ ಸಹೋದರು ಪೊಲೀಸರಿಗೆ ಸುದ್ದಿ ತಿಳಿಸಿದ್ದರು. ಆಗ, ಪ್ರಕರಣ ಹೊರಬಿದ್ದಿತ್ತು.

ತನಿಖೆಗೆ ಆರು ತಂಡ

ಶಿಸ್ತಿನ ಅಧಿಕಾರಿಯಾಗಿದ್ದ ಪ್ರತಿಮಾ ಅವರು ಇತ್ತೀಚೆಗೆ ಅನಧಿಕೃತ ಗಲ್ಲು ಗಣಿಗಾರಿಕೆಗಳ ಮೇಲೆ ದಾಳಿ ನಡೆಸಿದ್ದರೆನ್ನಲಾಗಿತ್ತು. ಅದೇ ದ್ವೇಷದ ಮೇಲೆಯೇ ಅವರನ್ನು ಕೊಲ್ಲಲಾಗಿರಬಹುದು ಎಂದು ಹೇಳಲಾಗಿತ್ತು. ಹಾಗಾಗಿ, ಪೊಲೀಸರು ಪ್ರಕರಣದ ತನಿಖೆಗಾಗಿ ಆರು ತಂಡಗಳನ್ನು ರಚಿಸಿದ್ದರು. ಆದರೆ, ಅ. 6ರಂದು ಪ್ರತಿಮಾ ಅವರ ಕಾರು ಚಾಲಕನೇ ಕೊಂದಿರುವ ಬಗ್ಗೆ ಪೊಲೀಸರು ಹೇಳಿದ್ದಾಗಿ ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದರ ಸತ್ಯಾಸತ್ಯತೆಗಳು ಬಗ್ಗೆ ಬಹಿರಂಗವಾಗಲಿವೆ.

Post a Comment

Previous Post Next Post