ಟಿಪ್ಪುವನ್ನು ಕೊಂದ ಉರಿಗೌಡ, ನಂಜೇಗೌಡರ ಶಾಶ್ವತ ದ್ವಾರ ನಿರ್ಮಿಸುತ್ತೇವೆ - ಸಿ ಟಿ ರವಿ ಹೇಳಿಕೆ

 ಕೊಪ್ಪಳ:ಉರಿಗೌಡ, ನಂಜೇಗೌಡರ ದ್ವಾರವನ್ನು ಏಕೆ ತೆರವುಗೊಳಿಸಿದ್ದಾರೋ ಗೊತ್ತಿಲ್ಲ. ಆದರೆ, ಅವರಿಬ್ಬರ ಶಾಶ್ವತ ದ್ವಾರ ನಿರ್ಮಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು.


ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಮತಾಂಧ, ನೂರಾರು ದೇವಾಲಯಗಳನ್ನು ಧ್ವಂಸ ಮಾಡಿದವನು. ನಂಬಿಕೆ ದ್ರೋಹಿ. ಅವನನ್ನು ಕೊಂದ ಉರಿಗೌಡ, ನಂಜೇಗೌಡರ ದ್ವಾರವನ್ನು ಏಕೆ ತೆರವುಗೊಳಿಸಿದ್ದಾರೋ ಗೊತ್ತಿಲ್ಲ. ನಾವು ಅವರ ಶಾಶ್ವತ ದ್ವಾರ ನಿರ್ಮಿಸುತ್ತೇವೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ಸಮುದಾಯಕ್ಕೆ ಶಾದಿ ಭಾಗ್ಯ ಯೋಜನೆ ಜಾರಿ ತಂದರು. ವೀರಶೈವ, ಲಿಂಗಾಯತ ಒಡೆಯುವ ಷಡ್ಯಂತ್ರ ಮಾಡಿದ್ದೇ ಕಾಂಗ್ರೆಸ್‌. ಈ ಬಗ್ಗೆ ಎಂ.ಬಿ. ಪಾಟೀಲರನ್ನು ವೈಯಕ್ತಿಕವಾಗಿ ಅವರನ್ನು ಕೇಳಿದರೆ ಹೇಳುತ್ತಾರೆ. ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದು ಯಾಕೆ ಎಂದು ಸಿದ್ದರಾಮಯ್ಯ ಅವರನ್ನು ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ಗೆ ಹೇಳಿಕೊಳ್ಳುವಂತಹ ನಾಯಕತ್ವವೇ ಇಲ್ಲ. ನಮ್ಮ ಸಾರ್ವಭೌಮಕ್ಕೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್‌ ನೇತಾರ ಮಾಡುತ್ತಾರೆ. ಅವರು ಬಾಯಿ ಬಿಟ್ಟರೆ ಬಣ್ಣಗೇಡು. ಸೋತಾಗ ಇವಿಎಂ ಬಗ್ಗೆ ಅನುಮಾನ ಪಡೋದು, ಗೆದ್ದಾಗ ಜನರ ಆಶೀರ್ವಾದ ಎನ್ನೋದು ಕಾಂಗ್ರೆಸ್‌ನ ದ್ವಂದ್ವ ನಿಲುವು ಎಂದು ಕಿಡಿಕಾರಿದರು.

ಆಕ್ರಮಣಕಾರರ ಇತಿಹಾಸವೇ ಭಾರತದ ಇತಿಹಾಸವಲ್ಲ

ನಮ್ಮದು ಕುಟುಂಬ ನೀತಿಯಲ್ಲ, ಸಬ್‌ ಕಾ ಸಾಥ್‌ ಸಬ್‌ ಕಾ ವಿಶ್ವಾಸ್‌ ಇದು ನಮ್ಮ ನೀತಿ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬಣ್ಣ ಇದು ಕಾಂಗ್ರೆಸ್‌ ನೀತಿ ಇದೆ. ಕಟ್ಟ ಕಡೆಯ, ದಲಿತರಿಗೆ ಬಲ ಕೊಡುವುದು ಬಿಜೆಪಿ ನೀತಿ. ಸಾಂಸ್ಕೃತಿಕ ಪುನರುತ್ಥಾನದ ಅಂಗವಾಗಿದೆ. ಆಕ್ರಮಣಕಾರರ ಇತಿಹಾಸವೇ ಭಾರತದ ಇತಿಹಾಸ ಎಂದು ಕಾಂಗ್ರೆಸ್‌ ಬಿಂಬಿತ ಮಾಡಿತ್ತು. ನಮ್ಮ ಬಿಜೆಪಿ ಸರಕಾರದ ನೇತೃತ್ವ ಹೇಳಿ ಹೊಗಳಿಸಿಕೊಳ್ಳುವಂತಹದ್ದಲ್ಲ. ನಮ್ಮ ನೇತಾರರ ನಾಯಕತ್ವವನ್ನು ಗುರುತಿಸಿ ಗೌರವಿಸುತ್ತಾರೆ ಎಂದರು.


Post a Comment

Previous Post Next Post