ಹಳೇ ನಾಟ ಸಾಗಣೆ, ಶಾಸಕ ಕುಮಾರ್‌ ಬಂಗಾರಪ್ಪ ವಿರುದ್ಧ ಪ್ರತಿಭಟನೆ

 ಶಿವಮೊಗ್ಗ-ಸೊರಬ: ಹಳೇ ತಾಲೂಕು ಕಚೇರಿಯ ಕೋಟ್ಯಂತರ ರೂ. ಬೆಲೆಬಾಳುವ ಮರದ ದಿಮ್ಮಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲೂಕು ರೈತ ಸಂಘ, ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಿಂದ ತಾಲೂಕು ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು. ಮಾಜಿ ಶಾಸಕ ಮಧು ಬಂಗಾರಪ್ಪ ಪ್ರತಿಭಟನೆಗೆ ಸಾಥ್‌ ನೀಡಿ ಮತ್ತಷ್ಟು ಚುರುಕು ತಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಸರಕಾರಿ ಕಚೇರಿಗಳ ಕೋಟ್ಯಂತರ ರೂ. ಬೆಲೆಯ ಹಳೇ ನಾಟವನ್ನು ಪುರಸಭೆ ಮುಂಭಾಗದ ಮಳಿಗೆಯ ಸೆಲ್ಲಾರ್‌ನಲ್ಲಿ ನಿಯಮಾನುಸಾರ ಸಂಗ್ರಹಿಸಿಡಲಾಗಿತ್ತು. ಫೆ.15 ಮತ್ತು 16 ರಂದು ರಿಯಾಜ್‌ ಭಾಷಾ ಎಂಬುವವರಿಗೆ ಹಳೇ ನಾಟ ಕೊಡಲು ತಹಸೀಲ್ದಾರ್‌ ಕಚೇರಿಯಿಂದ ದೂರವಾಣಿ ಮೂಲಕ ತಿಳಿಸಿದ್ದರೆಂದು ಪುರಸಭೆ ಮುಖ್ಯಾಧಿಕಾರಿ ಗಿರೀಶ್‌ ಸರಕಾರದ ನಿಯಮ ಗಾಳಿಗೆ ತೂರಿ ಕೊಟ್ಯಂತರ ರೂ. ಮೌಲ್ಯದ ನಾಟವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ.

ಇದರಲ್ಲಿ ಶಾಸಕರ ಆಪ್ತ ಸಹಾಯಕ ಉಮೇಶ್‌ ಗೌಡ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕೆ ಪುಷ್ಟಿ ಎಂಬಂತೆ ಇತ್ತೀಚೆಗೆ ಚಂದ್ರಗುತ್ತಿ ಹೋಬಳಿಯ ಕಾರ್ಯಕ್ರಮವೊಂದರಲ್ಲಿ ಶಾಸಕರೇ ಹಳೆ ನಾಟವನ್ನು ಮುನ್ನ ಎಂಬುವವನಿಗೆ ನಾವೇ ಕೊಡಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಹಲವು ಬಾರಿ ಲೋಕಾಯುಕ್ತ ಸೇರಿದಂತೆ ಮೇಲಧಿಕಾರಿಗಳಿಗೆ ಸೂಕ್ತ ತನಿಖೆ ಮಾಡುವಂತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರು.

ಪ್ರತಿಭಟನಾಕಾರರಿಂದ ಶಾಸಕರಿಗೆ ಧಿಕ್ಕಾರ
ಶಾಸಕ ಕುಮಾರ್‌ ಬಂಗಾರಪ್ಪ ಅವರು ಕಂದಾಯ ಅಧಿಕಾರಿಗಳ ಪ್ರಗತಿ ಸಭೆ ಮುಗಿಸಿ ತಾಲೂಕು ಕಚೇರಿಯಿಂದ ಮಧ್ಯಾಹ್ನ ಹೊರ ಬಂದಾಗ ಪ್ರತಿಭಟನಾಕಾರರು ಅವರ ವಿರುದ್ಧ ಧಿಕ್ಕಾರ ಕೂಗಿ ಮುತ್ತಿಗೆ ಹಾಕಲು ಮುಂದಾದರು. ಆಗ ಪ್ರತಿಭಟನಾಕಾರರ ಬಳಿ ಬಂದ ಶಾಸಕರನ್ನು ತನಿಖೆಗೆ ಒತ್ತಾಯಿಸಿದರು. ನಂತರ ಧರಣಿ ಮುಂದುವರಿದಿದ್ದು, ಸಂಜೆ ವೇಳೆಗೆ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿ, ಮನವಿ ಸ್ವಿಕರಿಸಿದರು. ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ರಾಜ್ಯ ಸಂಚಾಲಕ ಉಮೇಶ್‌ ಪಾಟೀಲ್‌, ಹುಚ್ಚಪ್ಪ, ಶಿವಣ್ಣ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಹೇಶ್‌, ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್‌, ಸೊರಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿ.ಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾ.ಪಂ ಮಾಜಿ ಅಧ್ಯಕ್ಷ ಎಚ್‌.ಗಣಪತಿ, ಸದಸ್ಯ ನಾಗರಾಜ ಚಿಕ್ಕಸವಿ, ಕೆ.ಪಿ.ಪ್ರವೀಣ್‌ ಕುಮಾರ್‌, ಎಂ.ಡಿ.ಶೇಖರ್‌, ಸುರೇಶ್‌, ಕೆ.ವಿ.ಗೌಡ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಧರಣಿಗೆ ಮಧು ಬಂಗಾರಪ್ಪ ಸಾಥ್‌
ಮಧ್ಯಾಹ್ನದ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಮಧು ಬಂಗಾರಪ್ಪ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸರಕಾರಿ ಕಚೇರಿಗಳ ನಾಟಗಳನ್ನು ಅಕ್ರಮ ಮಾರಾಟ ಮಾಡಿದವರ ವಿರುದ್ಧ ನಡೆಸುವ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ಇದರಲ್ಲಿ ಮೊದಲ ಆರೋಪಿ ಶಾಸಕ ಕುಮಾರ ಬಂಗಾರಪ್ಪ. ಇವರ ಬೆಂಬಲದಿಂದಲೆ ಸರಕಾರದ ಹಳೆ ನಾಟವನ್ನು ಅಕ್ರಮವಾಗಿ ಮಾರಾಟವಾಗಿದೆ. ಕುಮಾರ್‌ ಬಂಗಾರಪ್ಪ ಕಾಮಗಾರಿಗಳ ಪರ್ಸೆಂಟೇಜ್‌ ಸಾಕಾಗದೆ ಸರಕಾರಿ ಆಸ್ತಿ ಮಾರಿ ಚುನಾವಣೆ ಮಾಡಲು ಹೊರಟಿದ್ದಾರೆ. ಇದು ಖಂಡನೀಯ. ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು. ಶಾಸಕರ ಭ್ರಷ್ಟ ಆಡಳಿತ ಕೆಲವೇ ದಿನಗಳಲ್ಲಿ ಶಾಕೊನೆಗೊಳ್ಳಲಿದೆ ಎಂದರು.

Post a Comment

Previous Post Next Post