ಕೋವಿಡ್ ಕಲಿಸಿದ ಪಾಠ: ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಹೊಸ ವ್ಯವಸ್ಥೆಗೆ 2 ಕೋಟಿ ರೂ ಮೀಸಲಿಟ್ಟ ಬಿಬಿಎಂಪಿ

 ಕೋವಿಡ್'ನಿಂದ ಪಾಠ ಕಲಿತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏಕಾಏಕಿ ಸಾಂಕ್ರಾಮಿಕ ರೋಗ ಪರಿಸ್ಥಿತಿಗಳು ಎದುರಾದರೆ ಅದನ್ನು ನಿಭಾಯಿಸಲು ಹೊಸ ವ್ಯವಸ್ಥೆ ಸ್ಥಾಪಿಸಲು 2 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ.


By : Rekha.M
Online Desk

ಬೆಂಗಳೂರು: ಕೋವಿಡ್'ನಿಂದ ಪಾಠ ಕಲಿತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏಕಾಏಕಿ ಸಾಂಕ್ರಾಮಿಕ ರೋಗ ಪರಿಸ್ಥಿತಿಗಳು ಎದುರಾದರೆ ಅದನ್ನು ನಿಭಾಯಿಸಲು ಹೊಸ ವ್ಯವಸ್ಥೆ ಸ್ಥಾಪಿಸಲು 2 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ.

ಸಾಂಕ್ರಾಮಿಕ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬೆಂಗಳೂರು ಆರೋಗ್ಯ ವ್ಯವಸ್ಥೆಯನ್ನು (ಬಿಎಚ್‌ಎಸ್) ಸ್ಥಾಪಿಸಲು ಈ ಬಾರಿಯ ಬಜೆಟ್'ನಲ್ಲಿ 2 ಕೋಟಿ ರೂ.ಗಳನ್ನು ಬಿಬಿಎಂಪಿ ಮೀಸಲಿಟ್ಟಿದೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳನ್ನು ತಡೆಗಟ್ಟಲು ‘ಒನ್ ಹೆಲ್ತ್ ಪ್ಲಾನ್’ನ್ನೂ ಬಿಬಿಎಂಪಿ ಘೋಷಿಸಿದೆ.

“ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ನಡೆಸುವ ನಿಮ್ಹಾನ್ಸ್, ಇಎಸ್‌ಐ ಮತ್ತು ಇತರ ವೈದ್ಯಕೀಯ ಸಂಸ್ಥೆಗಳಿವೆ. ಇದಲ್ಲದೆ, ನಮ್ಮಲ್ಲಿ ವಿಕ್ಟೋರಿಯಾ, ಬೌರಿಂಗ್, ಮಿಂಟೋ ಮತ್ತು ಇತರ ಸಂಸ್ಥೆಗಳಂತಹ ರಾಜ್ಯ ಸರ್ಕಾರಿ ಆಸ್ಪತ್ರೆಗಳಿವೆ. ಬಿಬಿಎಂಪಿಯಲ್ಲಿ ಕೂಡ ಹಲವಾರು ಆಸ್ಪತ್ರೆಗಳನ್ನು ಸಹ ನಡೆಸುತ್ತಿದೆ. ಆದರೆ, ಈ ಎಲ್ಲ ಕೇಂದ್ರಗಳ ನಡುವೆ ಸಮನ್ವಯದ ಕೊರತೆಯಿದ್ದು, ಇದರ ಪರಿಣಾಮ ರೋಗಿಗಳು ಉನ್ನತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇದನ್ನು ಪರಿಹರಿಸಲು 2 ಕೋಟಿ ವೆಚ್ಚದಲ್ಲಿ ಬಿಎಚ್‌ಎಸ್‌ ಸ್ಥಾಪಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹಣಕಾಸು ಆಯುಕ್ತ ಜಯರಾಮ ರಾಯಪುರ ಬಜೆಟ್‌ ಮಂಡನೆ ವೇಳೆ ತಿಳಿಸಿದರು.

ಈ ಆರೋಗ್ಯ ವ್ಯವಸ್ಥೆಯಲ್ಲಿ ಕಾಲ್ ಸೆಂಟರ್‌ಗಳು, ಸಹಾಯ ಕೇಂದ್ರಗಳು, ಉಚಿತ ದಾಖಲಾತಿ ಮತ್ತು ಉಚಿತ ಚಿಕಿತ್ಸೆಯ ಮೂಲಕ ಎಲ್ಲಾ ರೋಗಿಗಳಿಗೆ ವೈದ್ಯಕೀಯ ಸೇವೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಇದು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ನಿರ್ವಹಿಸುವ ಮೂಲಕ ವೈದ್ಯಕೀಯ ಆರೈಕೆಯನ್ನೂ ನೋಡಿಕೊಳ್ಳಲಿದೆ. ಸಾಂಕ್ರಾಮಿಕ ರೋಗಗಳು ಮತ್ತು ಇತರ ವೈರಲ್-ಬ್ಯಾಕ್ಟೀರಿಯಾ ರೋಗಗಳ ತಡೆಗಟ್ಟುವಿಕೆಯನ್ನು ಇದು ಖಚಿತಪಡಿಸುತ್ತದೆ" ಎಂದು ರಾಯ್ಪುರ ಹೇಳಿದರು.

‘ಒನ್ ಹೆಲ್ತ್ ಪ್ಲಾನ್’ ಅಡಿಯಲ್ಲಿ, ಕಲುಷಿತ ಪರಿಸರದಿಂದ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗವನ್ನು ಅಧ್ಯಯನ ಮಾಡಲು 5 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಲ್ಯಾಬೋರೇಟರಿ ಮತ್ತು ಮೆಟ್ರೋಪಾಲಿಟನ್ ಮಾನಿಟರಿಂಗ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು. ಎಲ್ಲ 243 ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಇರುವುದನ್ನು ಖಚಿತಪಡಿಸಿಕೊಳ್ಳಲು 61 ಪಿಎಚ್‌ಸಿಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ 92 ಕೋಟಿ ರೂಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಆರೋಗ್ಯ ವೈದ್ಯೆ ಮತ್ತು ಸಂಶೋಧಕಿ ಡಾ.ಸಿಲ್ವಿಯಾ ಕರ್ಪಗಂ ಮಾತನಾಡಿ, ಕೇವಲ ಪಿಎಚ್‌ಸಿಗಳ ನಿರ್ಮಾಣವಷ್ಟೇ ಸಾಕಾಗುವುದಿಲ್ಲ. ಅಗತ್ಯವಿರುವವರಿಗೆ ಅನುಕೂಲವಾಗುವಂತೆ ಅವುಗಳನ್ನು ಸಜ್ಜುಗೊಳಿಸಬೇಕು ಎಂದು ಹೇಳಿದ್ದಾರೆ.




Post a Comment

Previous Post Next Post