ಜನಸಂಖ್ಯಾ ನೀತಿಗೆ ವಿರೋಧ: ಓವೈಸಿಗೆ ಸಿ.ಟಿ. ರವಿ ತಿರುಗೇಟು


ಜನಸಂಖ್ಯಾ ನೀತಿ ವಿರೋಧಿಸಿರುವ ಅಸಾದುದ್ದೀನ್ ಓವೈಸಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಹಿಂದೆ ರಜಾಕ್‌ರ ಮುಂದುವರೆದ ಭಾಗವೇ ಈ ಎಂಐಎಂ. ನಾನು ಹಳ್ಳಿಯಿಂದ ಬಂದವನು, ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲ ವರ್ಗದವರಿಗೂ ಜನಸಂಖ್ಯಾ ನೀತಿಯ ಅಗತ್ಯತೆಯ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ತಿಳಿಸಿದರು.ಆದರೆ ಜನಸಂಖ್ಯೆ ನಿಯಂತ್ರಣ ಸಂಬಂಧ ಓವೈಸಿ ವಿರೋಧಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಮೊದಲಿನಿಂದಲೂ ಎಂಐಎಂ ಇದನ್ನೇ ಹೇಳುತ್ತಾ ಬಂದಿದೆ. ಇದರ ಪೂರ್ವಾಶ್ರಮ ತಿಳಿದವರು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ದೇಶದ ಹಿತದೃಷ್ಠಿಯಿಂದ ಮೋಹನ್ ಭಾಗವತ್ ಈ ಸಲಹೆ ನೀಡಿದ್ದಾರೆ. ಸಂಸತ್‌ನಲ್ಲಿ, ವಿಧಾನಸಭೆ ಸೇರಿದಂತೆ ಎಲ್ಲೆಡೆ ಚರ್ಚೆಯಾಗಲಿ. ಆ ನಂತರ ಜಾರಿಗೆ ಬರಲಿ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ದೇಶದ ನಿರುದ್ಯೋಗ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಸಮಾನತೆ, ನಿರುದ್ಯೋಗ ಎಲ್ಲವನ್ನೂ ಸ್ವೀಕರಿಸುತ್ತೇವೆ ಎಂದರು.
ಅಸಮಾನತೆ, ಬಡತನ ಎಲ್ಲವೂ ವಿಶ್ವಗುರುವಾಗಲು ಅಡೆತಡೆಗಳಾಗಿವೆ. ಇವನ್ನೆಲ್ಲ ತೊಡೆದು ಹಾಕಿದರು ವಿಶ್ವಗುರು ಆಗಬಹುದು ಎಂದರು.ಜಾತೀಯತೆ ಮೂಲಕ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ದೇಶದಲ್ಲಿ ೭೫ ವರ್ಷ ಆಳ್ವಿಕೆ ನಡೆಸಿದ ಪಕ್ಷಕ್ಕೆ ಅಸಮಾನತೆ ಹೇಳುವ ನೈತಿಕತೆ ಇಲ್ಲ. ನೆಹರು, ಇಂದಿರಾಗಾಂಧಿ ಅವರು ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು, ಇದು ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಕಿಡಿಕಾರಿದರು.
 

Post a Comment

Previous Post Next Post